ನಮ್ಮ ದಾವಣಗೆರೆ: ಭೀಕರ ಕಾರು ಅಪಘಾತದಲ್ಲಿ ತನ್ನನ್ನು ತಾನು ರಕ್ಷಣೆ ಮಾಡಿಕೊಂಡು ಅದರ ಜೊತಯಲ್ಲೇ ತಂದೆ-ತಾಯಿಯನ್ನೂ ರಕ್ಷಣೆ ಮಾಡಿದ ಪೋರ ಕೀರ್ತಿ ವಿವೇಕ್ ಸಾಹುಕಾರ್ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.
ಕೀರ್ತಿ ತನ್ನ ಕುಟುಂಬದೊಂದಿಗೆ ಜಗಳೂರಿನ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರು ಅಪಘಾತವಾಗಿ ರಸ್ತೆ ಪಕ್ಕದ ಗುಂಡಿಗೆ ಬಿದ್ದಿತ್ತು. ಸಣ್ಣಪುಟ್ಟ ಗಾಯಗೊಂಡಿದ್ದ ಕೀರ್ತಿ ಕಾರ್ನಿಂದ ಹೊರಬಂದು, ತೀವ್ರವಾಗಿ ಗಾಯಗೊಂಡಿದ್ದ ತಂದೆ ಹಾಗೂ ತಾಯಿ ರಕ್ಷಣೆ ಮಾಡಿ ಪೊಲೀಸರಿಗೂ ಕರೆ ಮಾಡಿ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದನು. ಅಪಘಾತದ ಸಮಯದಲ್ಲಿ ಬಾಲಕ ತೋರಿದ ಧೈರ್ಯಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆ ಈಗಾಗಲೇ ನವೆಂಬರ್ 1ರಂದು 2022-23ನೇ ಸಾಲಿನ ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಇದೀಗ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.
ಜನವರಿ 26ರಂದು ಗಣರಾಜ್ಯೋತ್ಸವದ ದಿನದಂದು ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೀರ್ತಿ ವಿವೇಕ್ ಜಗಳೂರಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಮಂಜುನಾಥ್ ಸಾಹುಕಾರ್, ಶ್ರುತಿ ದಂಪತಿ ಪುತ್ರನಾಗಿದ್ದಾನೆ.