ನಮ್ಮ ದಾವಣಗೆರೆ ಸೆ. 29: ಸೆ.09 ರಂದು ಕಳ್ಳರು ತಮ್ಮ ಅಂಗಡಿಯ ಶೆಟರ್ಸ ಲಾಕ್ ಮುರಿದು ಸುಮಾರು 60 ಕೆ ಜಿ ಬೆಳ್ಳಿ, 10 ಗ್ರಾಂ ಬಂಗಾರ ಮತ್ತು 2,500/- ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನಗರದ ವಿಜಯಲಕ್ಷ್ಮೀ ರಸ್ತೆಯ ಪವನ್ ಜ್ಯೂಯಲರ್ಸ್ ಮಾಲೀಕ ಕಿಶೋರ್ ಕುಮಾರ್ ಕೆ.ಟಿ ಅವರು ದೂರು ನೀಡಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಆರ್.ಬಿ. ಬಸರಗಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಹೆಚ್. ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ ಐ ಜಿ.ನಾಗರಾಜ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಆರೋಪಿ ಮತ್ತು ಮಾಲಿನ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಸದರಿ ಪೊಲೀಸ್ ತಂಡವು ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತರು ಹಾಗೂ ಸ್ವತ್ತಿನ ಪತ್ತೆ ಕಾರ್ಯ ಕೈಗೊಂಡಿದ್ದು, ವಿವಿಧ ಕಡೆ ಮಾಹಿತಿಯನ್ನು ಕಲೆಹಾಕಿ ಭಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಮೇಲ್ಕಂಡ ಪ್ರಕರಣ ಆರೋಪಿತನಾದ ಜೀಬನ್ ಸಿಂಗ್ @ ಶಂಕರ್ ಸಿಂಗ್, ಸುಮಾರು 55 ವರ್ಷ, ಬಬಲಾದ ಗ್ರಾಮ, ಕಲಬುರಗಿ ಜಿಲ್ಲೆ, (ಸ್ವಂತ ಊರು: ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ) ಈತನನ್ನು ಬಂಧಿಸಲಾಗಿದೆ.
ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿತನು ದಾವಣಗೆರೆ ನಗರದಲ್ಲಿನ ಪವನ್ ಜ್ಯೂಯೆಲರ್ಸ ಬೆಳ್ಳಿ-ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಅಂಗಡಿಯಲ್ಲಿನ ಪೂಜಾ ಸಾಮಾನುಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡು ಕಳ್ಳತನ ಮಾಡಿದ ಎಲ್ಲಾ ಬೆಳ್ಳಿಯ ವಸ್ತುಗಳನ್ನು ರಾಣೆಬೇನ್ನೂರು ನಗರದ ಎಂ.ಜಿ ರಸ್ತೆಯಲ್ಲಿರುವ ಬೆಳ್ಳಿ-ಬಂಗಾರದ ಅಂಗಡಿಯೊಂದರ ಮಾಲೀಕನಿಗೆ ಮಾರಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ.