ದಾವಣಗೆರೆ ಜು. 20: ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ಹೆಡೆಮುರಿ ಕಟ್ಟಿರುವ ಸಿಸಿಬಿ ಪೊಲೀಸರು, ಇದೀಗ ಶಾಂತಿಗೆ ಹೆಸರುವಾಸಿಯಾಗಿರುವ ದಾವಣಗೆರೆಯಲ್ಲಿ ಶಂಕಿತ ಉಗ್ರನೊಬ್ಬ ಸೆರೆ ಸಿಕ್ಕಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ದಾವಣಗೆರೆ ಆಜಾದ್ ನಗರದಲ್ಲಿ ವಾಸವಿದ್ದ ಫಯಾಜ್ (32) ಬಂಧಿತ ಶಂಕಿತ ಉಗ್ರಗಾಮಿ ಯಾಗಿದ್ದು, ನಿನ್ನೆ ಮಧ್ಯ ರಾತ್ರಿ ಕಾರ್ಯಾಚರಣೆ ನಡೆಸಿ ಫಯಾಜ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಏರಿಯಾವೊಂದರಲ್ಲಿ ಅಡಗಿಸಿಟ್ಟಿದ್ದ ನಾಲ್ಕೈದು ಗ್ರೆನೇಡ್ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದೂ ಇದರ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದ್ದ್ದೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ ನೀಡಿದ್ದಾರೆ. ಬಂಧಿತ ಶಂಕಿತ ಉಗ್ರ ಫಯಾಜ್ ಬೆಂಗಳೂರು, ಚಿತ್ರದುರ್ಗದಲ್ಲಿ ವುಡ್ ವರ್ಕ್ ಪಾಲಿಶ್ ಹಾಗೂ ಪೇಂಟಿಂಗ್ ಕೆಲಸ ಮಾಡುತ್ತಿದ್ದ. ದಾವಗೆರೆಯಲ್ಲಿ ಈತನ ಎರಡನೇ ಪತ್ನಿ ಇದ್ದು, ಆಗಾಗ್ಗೆ ಇಲ್ಲಿಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.
ಶಂಕಿತ ಉಗ್ರ ಫಯಾಜ್ ಮೇಲಿವೆ 5 ಕೇಸ್ಗಳು:
ಫಯಾಜ್ ಈ ಹಿಂದೆಯೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಕೇಳಿಬಂದಿದೆ. ಬೆಂಗಳೂರಿನಲ್ಲಿ ಡ್ರಗ್ಸ್, ಆಯುಧ ಮಾರಾಟ ಪ್ರಕರಣ ಸಂಬಂಧ ಐದು ಪ್ರಕರಣಗಳು ದಾಖಲಾಗಿವೆ. ಅಕ್ರಮ ಆಯುಧ ಮಾರಾಟ ಪ್ರಕರಣದಲ್ಲಿ ಜೈಲು ಸೇರಿದ್ದ ಈತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆ ಆಗಿ ಬಂದಿದ್ದ ಎಂದು ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರು ಮಾಹಿತಿ ನೀಡಿದ್ದಾರೆ.