ನವದೆಹಲಿ: ಅಯೋಧ್ಯೆಯ ಭವ್ಯ ರಾಮ ಮಂದಿರವನ್ನು 2024 ರ ಜನವರಿ 1 ರಂದು ಭಕ್ತರಿಗೆ ತೆರೆಯಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತ್ರಿಪುರಾದಲ್ಲಿ ಇಂದು ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಗೃಹ ಸಚಿವರು ಈ ಘೋಷಣೆ ಮಾಡಿದರು.
ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ರಾಮಮಂದಿರ ನಿರ್ಮಾಣ ಪ್ರಕರಣಕ್ಕೆ ನ್ಯಾಯಾಲಯಗಳಲ್ಲಿ ಅಡ್ಡಿಪಡಿಸುತ್ತಿದೆ ಆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ ನಂತರ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ ಎಂದು ಅವರು ಹೇಳಿದರು.
2024 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ ಆದುದರಿಂದ 8 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ರಾಮ ಮಂದಿರ ದೇವಾಲಯವನ್ನು ಭಕ್ತರಿಗೆ ತೆರೆಯುವುದು ಒಂದು ಮೈಲಿಗಲ್ಲು ಆಗುವುದು ಎನ್ನಲಾಗುತ್ತಿದೆ.
ದೇವಾಲಯದ ವಿಸ್ತೀರ್ಣ ಮತ್ತು ಅದರ ಪ್ರಾಂಗಣ ಸೇರಿದಂತೆ ಒಟ್ಟು ಎಂಟು ಎಕರೆ ಜಾಗವನ್ನು ಸುತ್ತುವರಿದು ಆಯತಾಕಾರದ ಎರಡು ಅಂತಸ್ತಿನ ‘ಪರಿಕ್ರಮ’ ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಅದರ ಪೂರ್ವ ಭಾಗದಲ್ಲಿ ಮರಳುಗಲ್ಲಿನಿಂದ ಮಾಡಿದ ಪ್ರವೇಶ ದ್ವಾರವಿರುತ್ತದೆ. ದೇವಾಲಯದ ಗರ್ಭಗುಡಿಯೊಳಗೆ ರಾಜಸ್ಥಾನದ ಮಕ್ರಾನಾ ಬೆಟ್ಟಗಳ ಬಿಳಿ ಅಮೃತಶಿಲೆಯನ್ನು ಬಳಸಲಾಗುವುದು.