ನಮ್ಮ ದಾವಣಗೆರೆ ಅ. 31: ದಾವಣಗೆರೆ ಜಿಲ್ಲಾಡಳಿತದಿಂದ ಸುವರ್ಣ ಕರ್ನಾಟಕ ವಿಶೇಷ ಸ್ತಬ್ದಚಿತ್ರವು ಈ ಬಾರಿ ರಾಜ್ಯೋತ್ಸವ ವಿಶೇಷವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಸ್ತಬ್ದ ಚಿತ್ರವನ್ನು ನಿರ್ಮಿಸಲಾಗಿದೆ.
ಸ್ತಬ್ದಚಿತ್ರವನ್ನು ದಾವಣಗೆರೆ ಚಿತ್ರಕಲಾ ಪರಿಷತ್(ರಿ) ಮಾರ್ಗದರ್ಶನದಲ್ಲಿ ಕಲಾವಿದರಾದ ಡಿ. ಶೇಷಚಲ, ಚಂದ್ರಶೇಖರ ಸಂಗ ಹಾಗೂ ಶಿವಕುಮಾರ್ ಅವರು ಸ್ತಬ್ದಚಿತ್ರ ನಿರ್ಮಾಣ ಮಾಡಿದ್ದಾರೆ. ಚಲಿಸುವ ವಾಹನವನ್ನು ವೇದಿಕೆಯಾಗಿಸಿ ಅದರಲ್ಲಿ ಕುಳಿತಿರುವ ತಾಯಿ ಭುವನೇಶ್ವರಿ, ಎದುರಿನಲ್ಲಿ ವೃತ್ತಾಕಾರದಲ್ಲಿ ಸುತ್ತುವ ಅಷ್ಟಭುಜಕ್ಕೆ ಎಂಟು ಜ್ಞಾನಪೀಠ ವಿಜೇತ ಸಾಹಿತಿಗಳನ್ನು ಜೋಡಿಸಲಾಗಿದೆ. ಇದರ ಮೇಲಿರುವ ಗೋಪುರದಲ್ಲಿ ಕನ್ನಡ ಧ್ವಜ ರಾರಾಜಿಸುತ್ತದೆ. ವಾಹನಕ್ಕೆ ದಾವಣಗೆರೆ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ ಚಿತ್ರಗಳನ್ನು ಜೋಡಿಸಲಾಗಿದೆ.
ಸ್ತಬ್ದಚಿತ್ರದಲ್ಲಿ ಭುವನೇಶ್ವರಿ ರೂಪದರ್ಶಿಯಾಗಿ ದವನ ವಾಣಿಜ್ಯ ಕಾಲೇಜಿನ ಪಿಯು ವಿದ್ಯಾರ್ಥಿನಿ ಜಿವಿಕಾ ಜಿಎಂ ಗಮನ ಸೆಳೆಯುವರು. ಮೊಟ್ಟ ಮೊದಲ ಬಾರಿಗೆ ಸುವರ್ಣ ಕರ್ನಾಟಕ ವಿಶೇಷವಾಗಿ ಸ್ತಬ್ದಚಿತ್ರಕ್ಕೆ ನಿರ್ಧಾರ ಮಾಡಲಾಯಿತು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.